Wednesday, January 31, 2018

ಬಾಳ ಸಂಗಾತಿ


           ಸಂಗಾತಿಯ  ಆಗಮನ  ಜೀವನದ  ಪ್ರಮುಖ  ಘಟ್ಟಗಳಲ್ಲೊಂದು
           ಅದಕಾಗಿ  ವರುಷಗಳೇ  ಕಾಯುವೆವು ,   ಕನಸುಗಳ  ಹೊತ್ತುಕೊಂಡು
           ಕಾದಿರುವರು  ಎಲ್ಲೋ ,  ನಮಗಾಗೇ ,  ಜನ್ಮ ತಾಳಿಕೊಂಡು
           ಅದ್ಯಾವುದೋ  ಬಂಧ  ತಂದುಗೂಡಿಸುವುದಿಬ್ಬರನ್ನೂ  ಅರಸಿಕೊಂಡು

           ಬದುಕೆಂಬ  ಬಂಡಿಯ  ನೊಗವೆಳೆಯುವ  ಆ  ಎರಡು  ಜೀವಿಗಳೇ  ಸಂಗಾತಿಗಳು
           ಪರಸ್ಪರ  ವ್ಯಕ್ತಿತ್ವದ  ಬಗೆಗೆ  ಸಮಾನತೆಯಿದ್ದಾಗಲೇ ,   ಉಳಿಯುವುದು  ಸಂಬಂಧಗಳು
           ಇಬ್ಬರ  ಮನಸುಗಳೂ  ಬೆರೆತು  ಅರಿತುಕೊಂಡಾಗಲೇ  ಏಳುವುದು  ಅನುರಾಗದ  ಅಲೆಗಳು
           ಇದನ್ನರಿಯದೆ  ಕಳಚಿಕೊಂಡಿವೆ ,   ಅದೆಷ್ಟೋ ,  ಮದುವೆಗಳ  ಕೊಂಡಿಗಳು

           ಬಾಳಿನ  ಬಂಗಾರದ  ಕ್ಷಣಗಳಿಗೆ  ಸಾಕ್ಷಿಯಾಗುವುದು  ನಮ್ಮೀ  ಸಂಗಾತಿ
           ಮುಳ್ಳಿನ  ಹಾದಿಯಲ್ಲೂ  ಜೊತೆಯಾಗೇ  ಸಾಗುವವರೇ  ಸತಿ  ಪತಿ
           ಪರಸ್ಪರ  ಅಂತರಂಗದ  ಸೌಂದರ್ಯವರಿತವರು  ಕಡೆವರೆಗೂ  ನವ ದಂಪತಿ
           ಸ್ವಯಂ ಪ್ರತಿಷ್ಟೆ ,  ಅಹಂಕಾರಗಳೇ  ಮಾಡುವುದು  ಮಧುರವಾದ  ಸಂಬಂಧವನ್ನು  ಬೆಂಕಿಗಾಹುತಿ.

           ಎಂದಿಗೂ  ಬಂಧನದ  ಗೂಡು  ಕಟ್ಟದಿರಿ  ನಿಮ್ಮ  ಪ್ರೀತಿಗೆ
           ಸ್ವಚ್ಚಂಧ  ಹಾರಾಟವೇ  ಪ್ರಿಯವಾದುದು  ಪ್ರಣಯ  ಪಕ್ಷಿಗಳಿಗೆ
           ಪರಸ್ಪರ  ಚರ್ಚಿಸಿ  , ಬಗೆಹರಿಸಿ  ಬಂದೆರಗಿದಾಗ  ವಿಷಮ  ಗಳಿಗೆ
           ಉತ್ತಮ  ಸಂಗಾತಿಯು  ನಿಜವಾಗಿಯೂ  ಬೆನ್ನೆಲುಬಿನಂತೆ  ನಿಮ್ಮ  ಬಂಗಾರದ  ಬಾಳಿಗೆ.


                                                                                                               - ಅನುಪಮ .ಬಿ .ಜಿ  ಪ್ರಸಾದ್

Tuesday, January 30, 2018

ಮಾನವೀಯತೆ


    ಮಾನವೀಯತೆ ಮನುಜನ ವ್ಯಕ್ತಿತ್ವಕ್ಕೆ ಕಳಶಪ್ರಾಯ
    ಮರೆತುದಾದರೆ ಅದನು, ತಪ್ಪಿದ್ದಲ್ಲ ಮನುಕುಲಕೆ ಅಪಾಯ

     ಪ್ರಾಣಿಗಳಲ್ಲಿ ಅತ್ಯುನ್ನತ ಸ್ಥಾನ ಮನುಜಗೆ,
     ಅದುವೇ ಬಹುದೊಡ್ಡ ಧನ್ಯತೆ ನಮಗೆ.

     ಯಾಂತ್ರೀಕೃತ ಬದುಕಲ್ಲಿ ಮೌಲ್ಯಗಳು ಅದೃಶ್ಯವಾಗದಿರಲಿ
     ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವೀಯತೆಯ ಕೊಂಡಿ ಕಳಚದಿರಲಿ

     ಮತ್ತೊಬ್ಬನ ಕಷ್ಟಕ್ಕೆ ಕರತಾಡನ ಬೇಡ
     ಮುಂದೊಮ್ಮೆ ನಮಗೂ ಆ ದಿನವುಂಟೆಂದು ಮರೆಯಬೇಡ

     ಸ್ಪರ್ಧೆ, ಪ್ರತಿಸ್ಪರ್ಧೆ ಜೀವನದ ಅವಿಭಾಜ್ಯ ಅಂಗ
     ಅದೆಂದಿಗೂ ತಂದೊಡ್ಡದಿರಲಿ ವ್ಯಕ್ತಿತ್ವಗಳಿಗೆ ಭಂಗ

     ತಂತ್ರಜ್ಞಾನ ನಮ್ಮ ಬುದ್ಧಿಯ ಶ್ರೇಷ್ಟತೆಗೆ ಹಿಡಿದ ಕನ್ನಡಿ
     ಅದರೊಟ್ಟಿಗೆ,ಮನುಜನ ಭಾವನೆಗಳಿಗೂ ಸ್ಪಂದಿಸಿ ಮುನ್ನಡಿ

     ಎದುರಾಳಿಯನ್ನು ಎದುರಿನಿಂದ ಎದುರಿಸೋಣ
     ಮಾನವೀಯತೆ ಮರೆತು ಹಿಂದಿನಿಂದ ಯಾಕಾದರೂ ವಂಚಿಸೋಣ?

     ನಾವು ಏನೇ ಆದರೂ ಮೊದಲು ಮಾನವರು.
     ನಮ್ಮದೇ ಮನುಕುಲದ ಮತ್ತೊಬ್ಬ ಮನುಜನ ಪ್ರೀತಿಸುವವರು.

     ಇತರರ ಎಡವುವಿಕೆಯನ್ನೇ ಎದುರು ನೋಡುವ ಈ ಹೊತ್ತಲ್ಲಿ
     ಹುದುಗಿಸಿಬಿಡುವರೋ ಏನೋ ಮಾನವೀಯತೆಯನ್ನು ಕಗ್ಗತ್ತಲಲ್ಲಿ?

     ಈಗಲಾದರೂ ಎಚ್ಚೆತ್ತು ನಿಜವಾದ ಮನುಜರಾಗುವ
     ಸಂಪತ್ತಿನ ಹಿಂದೆಯೇ ಬೆನ್ನತ್ತುವ  ಬದಲು,ಇತರರ ನೋವುಗಳಲ್ಲಿಯೂ ಭಾಗಿಯಾಗುವ.

                                                                                                         -  ಅನುಪಮ .ಬಿ .ಜಿ  ಪ್ರಸಾದ್

Monday, January 29, 2018

ಜೀವನ ಹೊತ್ತಗೆ

                                                                

   ಜೀವನ ಒಂದು  ಬೃಹತ್  ಹೊತ್ತಗೆ,
   ಎಷ್ಟು ಓದಿದರೂ, ಗ್ರಹಿಸೆವು  ನಮ್ಮೀ  ಬುದ್ಧಿಮತ್ತೆಗೆ

   ಜೀವನದ  ಹೊತ್ತಗೆಯನ್ನು ಓದಿರುವೆವು ಎಂಬುವರು ಕೆಲವರು,
  ಆದರೆ, ಅದು ಕೇವಲ ಹೊತ್ತಗೆಯ ಮುಖಪುಟವೆಂಬುದನು ಅವರರಿಯರು.

  ಅದರ ಒಳಪುಟಗಳನ್ನು ನಾವಾಗಿಯೇ ಓದುವುದು ಅಸುಲಭ
  ಜೀವನವೇ ಹೊತ್ತಗೆಯ ಪುಟಗಳನ್ನು ತಿರುವಿಹಾಕುವ ಸಾಹೇಬ

  ತಿರುವಿದ ಅಧ್ಯಾಯವು ಬೇವೋ? ಬೆಲ್ಲವೊ? ಸ್ವೀಕರಿಸುವುದಿಲ್ಲಿ ಅನಿವಾರ್ಯ...
 ಯಾವುದಾದರೇನು? ಬಂದಿಹುದು ಪರೀಕ್ಷಿಸಲೆಂದೇ ನಮ್ಮ ಆತ್ಮಸ್ಥೈರ್ಯ..

 ಬೆಲ್ಲವಾದೊಡೆ ಬಗೆ ಬಗೆದು ಹೀರೋಣ ಅದರ ಸವಿಯ
 ಬೇವಾದೊಡೆ ಗಟ ಗಟನೆ ಕುಡಿದು ಸಿದ್ದವಾಗುವ, ಎದುರಿಸಲು ಕಷ್ಟಗಳ ಹಾದಿಯ....

 ಈ ಬೇವಾದರೂ ತಾನೇ ಎಷ್ಟು ದಿನ?
 ಬರಲೇ ಬೇಕಲ್ಲ ಬೆಲ್ಲದ ಅಧ್ಯಾಯ ಮುಂದೊಂದು ದಿನ?

 ಜೀವನವು ಕಷ್ಟ ಸುಖಗಳ ಸಮ್ಮಿಶ್ರಣ
 ಕಷ್ಟ ಬಂದೊಡನೆಯೇ ಕೊರಗುವಿರೇಕೆ ಪ್ರತಿಕ್ಷಣ?

 ದುಡುಕದಿರಿ, ಮರುಗದಿರಿ ಬೇವಿನ ಕ್ಷಣಗಳ ಬಗೆಗೆ,
 ಸದಾ, ಅರಸಿ ಹೊರಡದಿರಿ ಬೆಲ್ಲದ ಸವಿಯೆಡೆಗೆ.

 ಹೆಚ್ಚು ಹೆಚ್ಚು ಬೇವನ್ನು ಸವಿದವನಾಗುವ  ಮೇಧಾವಿ
 ಬರೀ ಬೆಲ್ಲವನ್ನೇ ಅರಸಿದರೆ, ಕೇವಲ ಅವನೊಬ್ಬ ಜೀವಿ.

                                                                                       -  ಅನುಪಮ ಬಿ ಜಿ  

#guru #teacher #sculptor #knowledge